Thursday 14 July 2016

ಮುಸಲ ಪರ್ವದ ಬಳಿಕ

ಯಮುನೆಯಾಚೆ
ಇದೆ ನಮ್ಮ ಹಳ್ಳಿ
ಅಗೊ ಅಲ್ಲಿ ದೂರದಲ್ಲಿ
ಕಬ್ಬಿನಾಲೆಯ ಮಾಡು
ಗಾಣದೆತ್ತಿನ ಕೋಡು
ಕಾಣಿಸಿತೆ ಮುಳುಗು ಬೆಳಕಿನಲ್ಲಿ


ಹಿಂದಣದ ಹಿರಿಯರಿಗೆ
ಒಂದೊಮ್ಮೆ ಕಂಡ
ವೇದವೇದ್ಯನ ಕಾಂಬ ಬಯಕೆ
ಶ್ಯಾಮ ಸುಂದರನ
ಕೆಳೆಭಕ್ತನಾಗುವಾ
ಭಾಗವತನ ಹರಕೆ

ಅಂಗ ಅಂಗದಲು
ಮಾರ್ದವದ ರಸವೊಸರಿ
ಅಭಿಸಾರ ಸಾರ ಮಣ್ಣು
ಹಸಿದೆನ್ನ ಹಲ್ಲಿಗಿದೊ
ರಸಭರಿತ ಹಣ್ಣು
ನೀರಜಾಕ್ಷನ ತುಟಿ ಕೆನ್ನೆ ಕಣ್ಣು

ಚಕ್ರ ಹಿಡಿದ ಕೈ
ಬೆರಲ ಸಂದಿನಲಿ
ಮಾಯದಿನ್ನು ಗಾಯ
ಕೊಳಲ ಸರ
ಮೈದಡವಿ ಹಾಯೆ
ನೋವು ಮಾದು ಮಾಯ

ಲಕ್ಷ ಕೋಟಿಗಳ
ಅಕ್ಷೋಹಿಣಿ ಕರಣಿಕೆ
ಬಿಡು ನಮ್ಮ ಅಳವಿಗಲ್ಲ
ಶಠ ಗೀತೆ ಬೋಧಿಸಿದ
ಕಮಲನಯನನ ಕಣ್ಣ
ಅಂಚ ಹನಿ ಹೊಳೆಯಿತಲ್ಲ

ನೀನು ನೀನೊ
ನಾ ನಾನೋ
ಮತ್ತವನು ಬೇರೆಯೇನೋ
ಸ್ವಚ್ಚಂದ ಛಂದ
ಅನಿಯಮದಾನಂದ
ನಾಡ ನಾಲಗೆಗಿದುವೆ ಹಾದರವೊ ಏನೋ

ಸಾಣೆಗೊಡ್ಡಿದಾ
ಇಟ್ಟಿಗೆಯ ರಜದಂತೆ
ಪಡುವಣದ ರಂಗ ಚಿತ್ತಾರ
ಮೃಗ ವಿವಶ ನಾದದಲಿ
ಇಂದೇಕೆ ಸುಳಿಯಿತೋ
ಚರಮ ಗೀತಾ ಹಂಸ ವಿಕಾರ






No comments:

Post a Comment